ಧಾರುಣಿಯೊಳು ರಘುವೀರತೀರ್ಥಕರ

ವಾರಿಜ ಭವರೆಂದೆನಿಸಿ ಮೆರೆದಾ ಗುರು


ಶ್ರೀರಾಮಾರ್ಯರ ಸತಿಯುದರದಿ ಜನಿಸಿ ದ್ವಿತಿಯಾಶ್ರಮದೊಳು

ಸ-ದ್ಭಾರ್ಯಾಪುತ್ರಾದಿಗಳಿಂದಲಿ ರಮಿಸಿ ಸಂಸಾರಸುಖವನು ಅ- |

ಸಾರ ಬಲು ಹೇಯವೆನುತ ಧಿಕ್ಕರಿಸಿ ತುರ್ಯಾಶ್ರಮ ವಹಿಸಿ

ಶ್ರೀರಾಮನ ಪದವಾರಿಜಯುಗ್ಮವ ಚಾರು ವಿಭವದಿಂದಾರಾಧಿಸಿದಾ||

ಶ್ರೀನಿವಾಸನ ಪ್ರತಿಮಗಳೆಂದೆನುತ ಮೃಷ್ಟಾನ್ನದಾನದಿಂ

ಕ್ಷೋಣೀವಿಬುಧರನು ಸದಾ ಮನ್ನಿಸುತ ಸನ್ಮಾನ ಮಾಡುತ |

ಜ್ಞಾನಕರ್ಮೇಂದ್ರಿಯದಿಂದಾಚರಿಸುತ ಕರ್ಮವನರ್ಪಿಸುತ

ಆನತಜನಸುರಧೇನು ಎಂದೆನಿಪ ಮಾನವಿರಾಯರ ಸ್ಥಾನದಿ ನೆಲೆಸಿಹ||

ಧಾತ್ರಿಯೊಳು ಕ್ಷೇತ್ರಗಳನು ಸಂಚರಿಸಿ ಮೂರ್ತಿಗಳನ್ನು ಚಿಂತಿಸಿ

ತೀರ್ಥಸ್ನಾನಾದಿಸುಕರ್ಮಾಚರಿಸಿ ಪಾತಕ ಪರಿಹರಿಸಿ |

ಮಾತರಿಶ್ವನ ಮತ ತತ್ತ್ವವ ತಿಳಿಸಿ ಛಾತ್ರರನುದ್ಧರಿಸಿ

ಖ್ಯಾತಕಾರ್ಪರಕ್ಷೇತ್ರದಿ ನರಮೃಗನಾಥನ ಪ್ರೀತಿಗೆ ಪಾತ್ರರೆನಿಸುವಾ ||