ರಾಮಚಂದ್ರರಾ ಪತ್ನಿ ಪ್ರೇಮದಿ ಜಾನಕಿ
ಈ ಮುನೀಂದ್ರನು ಗರ್ಭಧಾಮದಲ್ಲಿರೆ|
ಶ್ರೀಮಹೇಶಕ್ಷೇತ್ರದಿಂದ ಗ್ರಾಮ ಕಳಲೆಗೆ
ಭಾಮೆ ಬಂಡೆಯಲ್ಲಿ ಬರೆ ಈ ಮಹಿಮ ಪುಟ್ಟಿದ ||
ಉಸಿರಿಗೆ ಕಷ್ಟ ಈ ಶಿಶುವು ಪಡುತಿರೆ
ವ್ಯಸನ ಪಟ್ಟಳು ಕಂಬಳಿ ವಸನದಿಟ್ಟಳು |
ಕಸವಿಸೀಯಿಂದ ತಾ ಮನೆಗೆ ಬಂದಳು
ಶಶಿಯ ಮುಖದ ಶಿಶುವ ನೋಡಿ ಹಿಗ್ಗಿ ಪೋದಳು ||
ತಮ್ಮ ಕುಲಕೆ ತಿಲಕನೆಂದು ತಿಮ್ಮಗರ್ಪಿಸಿ
ಮೊಮ್ಮಗನ್ನ ಎತ್ತಿ ಅವ್ವ ಮುದ್ದನಿಟ್ಟಳು |
ರಮ್ಯ ನಾಮ ಶ್ರೀನಿವಾಸನೆಂದು ಕರೆದರು
ತನ್ಮನಾನಂದದಿಂದ ಲೀಲೆ ನೋಡ್ದರು ||
ಇದ್ದು ಮೈಸೂರಿನಲ್ಲಿ ವಿದ್ಯೆ ಕಲಿತರು
ಬುದ್ಧಿಜೀವಿ ಎನಿಸಿ ಪ್ರಸಿದ್ಧರಾದರು |
ಶುದ್ಧ ವಟುವೆನಿಸಿ ತಾವು ನಿಷ್ಠರಾದರು
ಮುದ್ದು ದ್ವಾರಕೀಯೊಡನೆ ಲಗ್ನವಾದರು ||
ರಕ್ಷಣಶಾಖೆ ಉದ್ಯೋಗ ದಕ್ಷರಾದರು
ಪಕ್ಷಿಧ್ವಜನ ದಯಕೆ ಕೆಲಸ ತಕ್ಷಣ ಬಿಟ್ಟರು |
ಅಕ್ಷಯಾಂಬರನ ಕೃಪೆಗೆ ದೀಕ್ಷರಾದರು
ಅಕ್ಷಯ ಫಲದ ದಾನವೆಲ್ಲ ದ್ವಿಜರಿಗಿತ್ತರು||
ಭಾಗ್ಯವೆಲ್ಲ ತ್ಯಜಿಸಿ ವೈರಾಗ್ಯ ತಾಳ್ದರು
ಶ್ರೀಗುರು ರಘುವೀರರಿಂದ ಯೋಗಿಯಾದರು |
ಸಾಗಿ ನಿತ್ಯ ಯಾತ್ರೆಯಿಂದ ಯೋಗವರಿತರು
ಬೇಗ ಮರುತ ಶಾಸ್ತ್ರವರಿತು ಪಠನ ಗೈದರು
ಮಾನವೀಯ ಭಕ್ತಸುರಧೇನು ಎನಿಸುವ
ಜ್ಞಾನಸುಧೆಯನಿತ್ತು ಅವರ ಬಿಡದೆ ಸಲಹುವ |
ಮಾನವೀವಾಸರಾಗಿ ಧ್ಯಾನಮಾಡುವ
ಜಾಣ ಲಕುಮೀಶನ್ನ ಸತತ ತುತಿಸುವ||